Skip to main content

ಮಕರ ಸಂಕ್ರಾಂತಿಯ ಆಚರಣೆ

ಕರ್ನಾಟಕ, ಅಂದ್ರ, ತೆಲಂಗಾಣದಲ್ಲಿ ಸಂಕ್ರಾಂತಿ, ಭೋಗಿ ಹಬ್ಬ, ತಮಿಳು ನಾಡಿನಲ್ಲಿ ಪೊಂಗಲ್, ಅಸ್ಸಾಮಿನಲ್ಲಿ ಬೀಹು, ಹಲವೆಡೆ ಉತ್ತರಾಯಣ, ಮಾಘಿ, ಹೀಗೆ ಹತ್ತು ಹಲವು ಹೆಸರುಗಳು ಈ ಮಕರ ಸಂಕ್ರಾಂತಿ ಹಬ್ಬಕ್ಕೆ. 

Kites


ಸಂಕ್ರಾಂತಿಯು ಅತ್ಯಂತ ಹಳೆಯ ಹಬ್ಬಗಳಲ್ಲಿ ಒಂದಾಗಿದ್ದು, ಸೌರಮಾನದ ಪ್ರಕಾರ ಆಚರಿಸುವ ಕೆಲವೇ ಕೆಲವು ಹಬ್ಬಗಳಲ್ಲಿ ಒಂದು. 

ಪ್ರತೀ ವರ್ಷ ಜನವರಿ 14 ಅಥವಾ 15ನೇ ತಾರೀಕು ಬರುವ ಸಂಕ್ರಾಂತಿ ಹಬ್ಬವು ಶಬರಿ ಮಲೆಯ ಅಯ್ಯಪ್ಪ ಸ್ವಾಮಿಯ ಭಕ್ತರಿಗೂ ವಿಶೇಷ ದಿನ. ಆ ದಿನ ಅಪರೂಪದ ಜ್ಯೋತಿಯೊಂದು ಕಾಣಿಸಿಕೊಂಡು ಸ್ವಲ್ಪ ಹೊತ್ತಿನಲ್ಲಿ ಮರೆಯಾಗುತ್ತದೆ, ಅದನ್ನು ಕಣ್ತುಂಬಿಕೊಳ್ಳಲೆಂದೇ ಲಕ್ಷಾಂತರ ಭಕ್ತರು ಅಲ್ಲಿ ನೆರೆದಿರುತ್ತಾರೆ. 

ಇನ್ನು, ಕರ್ನಾಟಕದಲ್ಲಿ "ಎಳ್ಳು- ಬೆಲ್ಲ ತಿಂದು ಒಳ್ಳೆ ಮಾತಾಡಿ" ಅಂತ ಅಕ್ಕ ಪಕ್ಕದ ಮನೆಗೆ ಎಳ್ಳು-ಬೆಲ್ಲ (ರೇಡಿಮೇಡ್ ಪ್ಯಾಕ್!) ಹಂಚುವುದೂ ಉಂಟು. ತಮಿಳು ನಾಡಿದಲ್ಲಿ ಜಲ್ಲಿಕಟ್ಟು ಎಂದು ಎತ್ತನ್ನು ಬೆದರಿಸುವ ಆಟ. ದೇಶದ ಹಲವೆಡೆ ಗಾಳಿಪಟವನ್ನು ಹಾರಿಸುವುದು , ದನ-ಕರುಗಳನ್ನು ಅಲಂಕರಿಸುವುದು ಇತ್ಯಾದಿ ನಡೆಯುತ್ತದೆ.  

ಮಾಘ ಸ್ನಾನ ಅನ್ನೋದು ದಕ್ಷಿಣ ಭಾರತದವರಿಗೆ ಅಷ್ಟೊಂದು ಪರಿಚಿತ ಅಲ್ಲದಿದ್ದರೂ, ಉತ್ತರ ಭಾರತದಲ್ಲಿ ಅದು ಒಂದು ಜಾತ್ರೆಯಂತೆ! ಸಂಕ್ರಾಂತಿಯನ್ನು ಸೂರ್ಯದೇವರ ಹಬ್ಬ ಎಂದೇ ಅಲ್ಲಿ ಆಚರಿಸಲಾಗುತ್ತದೆ. ಅಲ್ಲದೆ ಗಂಗಾ –ಯಮುನಾ ಸಂಗಮದ ಪ್ರಯಾಗ ಕ್ಷೇತ್ರದಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭ ಮೇಳ ಜಗತ್ತಲ್ಲೇ ಅತೀ ಹೆಚ್ಚು ಜನರು ಸೇರುವ ಹಬ್ಬಗಳಲ್ಲಿ ಒಂದು. ಸದಾ ಜನರಿಂದ ದೂರ ವಾಸಿಸುವ ಅಘೋರಿಗಳು ಬಂದು ಇದರಲ್ಲಿ ಪಾಲ್ಗೊಳ್ಳೋದು ಇನ್ನೊಂದು ವಿಶೇಷತೆ.  

ಮಕರ ಸಂಕ್ರಾಂತಿಯ ದಿನವನ್ನು “ಉತ್ತರಾಯಣದ ಆರಂಭ” ಎನ್ನುತ್ತಾರೆ. ಸಂಕ್ರಾಂತಿ ಎಂದರೆ ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸುವ ದಿನ. ಅದರ ನಂತರ ಹಗಲಿನ ಅವಧಿ ಹೆಚ್ಚುಕಾಲ ಇರುತ್ತದೆ. ಹಿಂದೂಗಳ ನಂಬಿಕೆಯ ಪ್ರಕಾರ ಉತ್ತರಾಯಣದ ಆರು ತಿಂಗಳ ಪುಣ್ಯಕಾಲದಲ್ಲಿ ಸತ್ತವರು ನೇರವಾಗಿ ಸ್ವರ್ಗ ಸೇರುತ್ತಾರೆ ಅನ್ನಲಾಗುತ್ತದೆ. ಮಹಾಭಾರತದಲ್ಲಿ, ಇಚ್ಚಾಮರಣಿಯಾದ ಭೀಷ್ಮ ಪಿತಾಮಹರು ಶರಮಂಚದಲ್ಲಿ ಮಲಗಿ, ಉತ್ತರಾಯಣ ಬಂದ ನಂತರ ತಮ್ಮ ದೇಹತ್ಯಾಗ ಮಾಡಿದರಂತೆ.   

 ಖಗೋಳ ಶಾಸ್ತ್ರದ ಪ್ರಕಾರ ಮಕರ ಸಂಕ್ರಾಂತಿ ಎಂದರೆ, ಆ ದಿನ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ, ಅಂದರೆ ಭೂಮಧ್ಯ ರೇಖೆಯ ಮೇಲಿನ ಭಾಗವು ಹೆಚ್ಚು ಹಗಲನ್ನು ಹೊಂದುತ್ತದೆ. ಸೂರ್ಯನ ಚಲನೆ ಮುಂದಿನ ಆರು ತಿಂಗಳ ಕಾಲ ಉತ್ತರಾಭಿಮುಖವಾಗಿರುತ್ತದೆ. 

ಭಾರತೀಯರು ಸೌರ - ಚಾಂದ್ರಮಾನ ಪದ್ಧತಿಯನ್ನು ಅನುಸರಿಸುತ್ತಾರೆ. ಪಂಚಾಂಗದಲ್ಲಿ ಇನ್ನೊಂದು ಕುತೂಹಲಕಾರಿ ವಿಷಯವೆಂದರೆ, ಪ್ರತಿ ಚಂದ್ರ ಮಾನ ಯುಗಾದಿಯ ದಿನ (ಹಿಂದೂ ಹೊಸ ವರ್ಷ), ಆಯಾ ಸಂವತ್ಸರದ ಪಂಚಾಂಗವನ್ನು ಓದಲಾಗುತ್ತದೆ. ಅದರಲ್ಲಿ "ಸಂಕ್ರಾಂತಿ ಪುರುಷ" ಎಂಬ ಉಲ್ಲೇಖವಿದೆ. ಅದು ಕೆಲವೊಮ್ಮೆ ಸ್ತ್ರೀಯೂ ಆಗಿರಬಹುದು. ಸಂಕ್ರಾಂತಿ ಪುರುಷನು ಬಳಸಿದ ವಸ್ತುಗಳು ದುಬಾರಿಯಾಗಬಹುದು, ವಿರಳವೂ ಇಲ್ಲವೇ, ಹೇರಳವೂ ಆಗಬಹುದು,ಹಾಗೂ ಅವನು ವಾಹನವಾಗಿ ಬಳಸಿದ ಪ್ರಾಣಿಗೂ ಕಂಟಕವಿರುತ್ತದೆ, ಅಲ್ಲದೆ, ಅವನು ಬಳಸಿದ ಲೋಹವೂ ದುಬಾರಿಯಾಗುತ್ತದೆ ಎoಬೆಲ್ಲ ವಿವರಣೆಗಳು ಇರುತ್ತದೆ.  




Comments